ಬೆಂಗಳೂರು: ಕರ್ನಾಟಕ ಸಾರ್ವಜನಿಕ ಖರೀದಿಗಳಲ್ಲಿ ಪಾರದರ್ಶಕತೆ ಕಾಯ್ದೆ (KTPP Act)ಯ ಕಲಂ 4(ಜಿ) ಅಡಿಯಲ್ಲಿ ಟೆಂಡರ್ ಪ್ರಕ್ರಿಯೆಯಿಂದ ವಿನಾಯಿತಿ ನೀಡಿ ಸರ್ಕಾರಿ ಕಾಮಗಾರಿಗಳನ್ನು ಮಂಜೂರು ಮಾಡುತ್ತಿರುವ ಕ್ರಮದ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ. ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಕಟ್ಟಡಗಳ ವಿಭಾಗ–1 ಮತ್ತು ವಿಭಾಗ–2ರಲ್ಲಿ ಕಳೆದ ಐದು ವರ್ಷಗಳಲ್ಲಿ 4(ಜಿ) ಅಡಿಯಲ್ಲಿ ಮಂಜೂರಾಗಿರುವ ಕಾಮಗಾರಿಗಳ ಕುರಿತು ಉನ್ನತ ಮಟ್ಟದ ಹಾಗೂ ಸ್ವತಂತ್ರ ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ಮಾದಿಗ ಗುತ್ತಿಗೆದಾರರ ಸಂಘ ಆಗ್ರಹಿಸಿದೆ.
ಈ ಸಂಬಂಧ ಸಂಘವು ರಾಜ್ಯದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆ ದೂರು ಸಲ್ಲಿಸಿ, 4(ಜಿ) ಅಡಿಯಲ್ಲಿ ಮಂಜೂರಾದ ಕಾಮಗಾರಿಗಳ ಸಂಪೂರ್ಣ ಕಡತಗಳು, ಅಧಿಕಾರಿಗಳ ಅನುಮೋದನೆಗಳು, ತುರ್ತು ಪರಿಸ್ಥಿತಿಯನ್ನು ಸಮರ್ಥಿಸುವ ದಾಖಲೆಗಳು ಹಾಗೂ ಕಾಮಗಾರಿಗಳ ಅಂದಾಜು ಮತ್ತು ದರ ನಿಗದಿ ಪ್ರಕ್ರಿಯೆಯನ್ನು ಪರಿಶೀಲಿಸುವಂತೆ ಮನವಿ ಮಾಡಿತ್ತು.
ದೂರು ಸಲ್ಲಿಸಿದ ಬಳಿಕವೂ ನಿರೀಕ್ಷಿತ ಮಟ್ಟದಲ್ಲಿ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ಕಾನೂನುಬದ್ಧ ಪರಿಹಾರಕ್ಕಾಗಿ ಸಂಘವು ಇದೀಗ ಕರ್ನಾಟಕ ಹೈಕೋರ್ಟ್ನ ಮೊರೆ ಹೋಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಡಾ. ಎಸ್. ಸಂಗಮೇಶ್ ತಿಳಿಸಿದ್ದಾರೆ.
4(ಜಿ) ಸಾಮಾನ್ಯ ಟೆಂಡರ್ಗೆ ಪರ್ಯಾಯವಾಗಬಾರದು
“ಸರ್ಕಾರಿ ಕಾಮಗಾರಿಗಳಲ್ಲಿ ಟೆಂಡರ್ ಪ್ರಕ್ರಿಯೆ ಪಾರದರ್ಶಕತೆ ಮತ್ತು ಸ್ಪರ್ಧಾತ್ಮಕತೆಯನ್ನು ಖಚಿತಪಡಿಸುವ ಪ್ರಮುಖ ವ್ಯವಸ್ಥೆಯಾಗಿದೆ. 4(ಜಿ) ಅಡಿಯಲ್ಲಿ ವಿನಾಯಿತಿ ನೀಡುವ ಪ್ರತಿಯೊಂದು ಪ್ರಕರಣದಲ್ಲೂ ಅದರ ಕಾನೂನುಬದ್ಧ ಆಧಾರ, ಅಗತ್ಯತೆ, ಕಾರಣ ಹಾಗೂ ಸಮರ್ಥ ಪ್ರಾಧಿಕಾರದ ಅನುಮೋದನೆ ದಾಖಲೆಗಳಲ್ಲಿ ಸ್ಪಷ್ಟವಾಗಿರಬೇಕು.
4(ಜಿ)ಯನ್ನು ಸಾಮಾನ್ಯ ಆಡಳಿತಾತ್ಮಕ ಅನುಕೂಲಕ್ಕಾಗಿ ಬಳಸಲಾಗುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿರುವುದರಿಂದ, ಸರ್ಕಾರವೇ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಸ್ಪಷ್ಟಪಡಿಸಬೇಕು” ಎಂದು ಡಾ. ಸಂಗಮೇಶ್ ಹೇಳಿದ್ದಾರೆ.
ವಿಧಾನಸೌಧ–ವಿಕಾಸಸೌಧದ ಕಾಮಗಾರಿಗಳಿಗೂ ತನಿಖೆ ಅಗತ್ಯ
ರಾಜ್ಯದ ಆಡಳಿತದ ಪ್ರಮುಖ ಕೇಂದ್ರಗಳಾದ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ನಡೆಯುತ್ತಿರುವ ಹಾಗೂ ಇತ್ತೀಚೆಗೆ ಮಂಜೂರಾಗಿರುವ ಭಾರೀ ಮೊತ್ತದ ಕಾಮಗಾರಿಗಳ ಬಗ್ಗೆಯೂ ಸರ್ಕಾರ ಸಂಪೂರ್ಣ ಪಾರದರ್ಶಕತೆ ತೋರಬೇಕು ಎಂದು ಸಂಘ ಆಗ್ರಹಿಸಿದೆ.
“ಈ ಕಾಮಗಾರಿಗಳಿಗೆ ಟೆಂಡರ್ ನಡೆದಿದೆಯೇ? ಟೆಂಡರ್ ವಿನಾಯಿತಿ ನೀಡಿದ್ದರೆ ಯಾವ ಕಾನೂನುಬದ್ಧ ಕಾರಣದ ಮೇಲೆ ನೀಡಲಾಗಿದೆ? 4(ಜಿ) ಬಳಸಿದ್ದರೆ ಅದರ ಅಗತ್ಯತೆ ಮತ್ತು ತುರ್ತು ಪರಿಸ್ಥಿತಿಯನ್ನು ಹೇಗೆ ಸಮರ್ಥಿಸಲಾಗಿದೆ? ಕಾಮಗಾರಿಗಳ ಅಂದಾಜು ಮೊತ್ತವನ್ನು ಯಾವ ಆಧಾರದ ಮೇಲೆ ನಿಗದಿಪಡಿಸಲಾಗಿದೆ? ಸ್ಪರ್ಧಾತ್ಮಕ ಟೆಂಡರ್ ಮೂಲಕ ಸರ್ಕಾರಕ್ಕೆ ಇನ್ನಷ್ಟು ಉತ್ತಮ ದರದಲ್ಲಿ ಕಾಮಗಾರಿ ದೊರೆಯುವ ಸಾಧ್ಯತೆ ಇತ್ತೇ?” ಎಂಬ ಪ್ರಶ್ನೆಗಳಿಗೆ ಸರ್ಕಾರ ದಾಖಲೆಗಳ ಆಧಾರದ ಮೇಲೆ ಸ್ಪಷ್ಟ ಉತ್ತರ ನೀಡಬೇಕು ಎಂದು ಡಾ. ಸಂಗಮೇಶ್ ಒತ್ತಾಯಿಸಿದ್ದಾರೆ.
“ಭಾರೀ ಕಾಮಗಾರಿಗಳಲ್ಲಿ ಅಧಿಕಾರಿಗಳ ಪಾತ್ರವೇನು?”
“ವಿಧಾನಸೌಧ, ವಿಕಾಸಸೌಧ ಸೇರಿದಂತೆ ಬೆಂಗಳೂರಿನಲ್ಲಿ ಭಾರೀ ಮೊತ್ತದ ಕಾಮಗಾರಿಗಳು ಭರದಿಂದ ಸಾಗುತ್ತಿರುವ ಸಂದರ್ಭದಲ್ಲಿ, ಕಾಮಗಾರಿ ಮಂಜೂರಿನಿಂದ ಹಿಡಿದು ಅಂದಾಜು, ತಾಂತ್ರಿಕ ಅನುಮೋದನೆ, ಟೆಂಡರ್ ಅಥವಾ 4(ಜಿ) ವಿನಾಯಿತಿ, ಗುತ್ತಿಗೆ ಹಂಚಿಕೆ ಹಾಗೂ ಬಿಲ್ ಪಾವತಿಯವರೆಗೆ ಪ್ರತಿಯೊಂದು ಹಂತದಲ್ಲಿ ಯಾವ ಅಧಿಕಾರಿಯ ಜವಾಬ್ದಾರಿ ಏನು ಎಂಬುದು ಸಾರ್ವಜನಿಕರಿಗೆ ತಿಳಿಯಬೇಕು” ಎಂದು ಡಾ. ಸಂಗಮೇಶ್ ಹೇಳಿದ್ದಾರೆ.
“ಅಧಿಕಾರಿಗಳ ಮೇಲೆ ಯಾವುದೇ ಪೂರ್ವನಿರ್ಧಾರಿತ ಆರೋಪ ಮಾಡುತ್ತಿಲ್ಲ. ಆದರೆ ಸಾರ್ವಜನಿಕ ಹಣದ ಕಾಮಗಾರಿಗಳಲ್ಲಿ ಅಧಿಕಾರಿಗಳ ನಿರ್ಧಾರ ಪ್ರಕ್ರಿಯೆ ಪಾರದರ್ಶಕವಾಗಿರಬೇಕು. ದಾಖಲೆಗಳನ್ನು ಪರಿಶೀಲಿಸಿದ ಬಳಿಕವೇ ಸತ್ಯಾಸತ್ಯತೆ ಹೊರಬರಬೇಕು” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ಸಾರ್ವಜನಿಕ ಹಣದ ಪ್ರತಿಯೊಂದು ರೂಪಾಯಿಗೂ ಲೆಕ್ಕ ಇರಬೇಕು”
“ಸಾರ್ವಜನಿಕ ಹಣದಿಂದ ನಡೆಯುವ ಪ್ರತಿಯೊಂದು ಕಾಮಗಾರಿಗೂ ಲೆಕ್ಕ ಇರಬೇಕು. ಗುತ್ತಿಗೆದಾರರಿಗೆ ಸಮಾನ ಅವಕಾಶ ಸಿಗಬೇಕು. ನಿಯಮ ಪಾಲನೆಯಾಗಿದ್ದರೆ ತನಿಖೆಯಿಂದ ಅದು ಸಾಬೀತಾಗಲಿ; ನಿಯಮ ಉಲ್ಲಂಘನೆಯಾಗಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮವಾಗಲಿ. ಇದೇ ನಮ್ಮ ಸಂಘದ ಸ್ಪಷ್ಟ ನಿಲುವು” ಎಂದು ಡಾ. ಎಸ್. ಸಂಗಮೇಶ್ ತಿಳಿಸಿದ್ದಾರೆ.
ದೂರುಗಳಿಂದ ಹೈಕೋರ್ಟ್ವರೆಗೆ ಹೋರಾಟ
ಮುಖ್ಯ ಕಾರ್ಯದರ್ಶಿಗೆ ದೂರು ನೀಡಿ 4(ಜಿ) ಅಡಿಯಲ್ಲಿ ಮಂಜೂರಾದ ಕಾಮಗಾರಿಗಳ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿದ್ದರೂ ನಿರೀಕ್ಷಿತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ಕಾನೂನುಬದ್ಧ ಪರಿಹಾರಕ್ಕಾಗಿ ಹೈಕೋರ್ಟ್ನ ಮೊರೆ ಹೋಗಲಾಗಿದೆ ಎಂದು ಸಂಘ ತಿಳಿಸಿದೆ.
“ಈ ಹೋರಾಟ ಯಾವುದೇ ವ್ಯಕ್ತಿ ಅಥವಾ ಅಧಿಕಾರಿಯನ್ನು ಗುರಿಯಾಗಿಸುವ ಉದ್ದೇಶದಿಂದಲ್ಲ. ಸರ್ಕಾರಿ ಕಾಮಗಾರಿಗಳಲ್ಲಿ ಪಾರದರ್ಶಕತೆ, ಸಮಾನ ಅವಕಾಶ, ಕಾನೂನು ಪಾಲನೆ ಮತ್ತು ಸಾರ್ವಜನಿಕ ಹಣದ ರಕ್ಷಣೆಯನ್ನು ಖಚಿತಪಡಿಸುವುದೇ ಸಂಘದ ಉದ್ದೇಶ” ಎಂದು ಡಾ. ಸಂಗಮೇಶ್ ಹೇಳಿದ್ದಾರೆ.
ಕಳೆದ ಹಲವು ವರ್ಷಗಳಿಂದ 4(ಜಿ) ಕಾಮಗಾರಿಗಳ ತನಿಖೆಗೆ ಆಗ್ರಹ
ಕಟ್ಟಡಗಳ ವಿಭಾಗ–1 ಮತ್ತು ವಿಭಾಗ–2ರಲ್ಲಿ ಕಳೆದ ಐದು ವರ್ಷಗಳಲ್ಲಿ 4(ಜಿ) ಅಡಿಯಲ್ಲಿ ಮಂಜೂರಾದ ಎಲ್ಲಾ ಕಾಮಗಾರಿಗಳ ಸ್ವತಂತ್ರ ತನಿಖೆ ನಡೆಸಬೇಕು. ಅಗತ್ಯವಿದ್ದಲ್ಲಿ ವಿಶೇಷ ಲೆಕ್ಕಪರಿಶೋಧನೆ ನಡೆಸಿ, ಸರ್ಕಾರದ ಬೊಕ್ಕಸಕ್ಕೆ ಯಾವುದೇ ಆರ್ಥಿಕ ನಷ್ಟ ಉಂಟಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು.
ಅಲ್ಲದೆ, ವಿಧಾನಸೌಧ–ವಿಕಾಸಸೌಧ ಸೇರಿದಂತೆ ಪ್ರಮುಖ ಸರ್ಕಾರಿ ಕಟ್ಟಡಗಳ ಭಾರೀ ಮೊತ್ತದ ಕಾಮಗಾರಿಗಳಲ್ಲಿ ಟೆಂಡರ್ ಪ್ರಕ್ರಿಯೆ, 4(ಜಿ) ವಿನಾಯಿತಿ, ಅಂದಾಜು, ದರ ನಿಗದಿ, ಅನುಮೋದನೆ ಹಾಗೂ ಪಾವತಿ ಪ್ರಕ್ರಿಯೆಗಳನ್ನು ಪರಿಶೀಲಿಸಬೇಕು.
ನಿಯಮ ಉಲ್ಲಂಘನೆ ಅಥವಾ ಅಧಿಕಾರದ ದುರುಪಯೋಗ ತನಿಖೆಯಲ್ಲಿ ದೃಢಪಟ್ಟಲ್ಲಿ, ಹೊಣೆಗಾರರ ವಿರುದ್ಧ ಇಲಾಖಾ ನಿಯಮಾನುಸಾರ ಹಾಗೂ ಅನ್ವಯಿಸುವ ಕಾನೂನುಗಳ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಾದಿಗ ಗುತ್ತಿಗೆದಾರರ ಸಂಘ ಸರ್ಕಾರವನ್ನು ಆಗ್ರಹಿಸಿದೆ.

