ನೋಟಿಸ್ ನೀಡದೆ ತೆರವುಗೊಳಿಸಿದ್ದು ಕಾನೂನು ಬಾಹಿರ ಚಟುವಟಿಕೆ : ಡಾ. ಎಸ್. ಸಂಗಮೇಶ್
ಬೆಂಗಳೂರು (ಆ.23): ಗಣೇಶ ಹಬ್ಬದ ಸಂಭ್ರಮಕ್ಕೆ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ AECS ಲೇಔಟ್ ನ ಗಣೇಶ್ ದೇವಸ್ಥಾನದ ಗೋಪುರವನ್ನು ನೋಟಿಸ್ ನೀಡಿದೆಯೇ ತೆರವುಗೊಳಿಸಿದ್ದನ್ನು ತೀವ್ರವಾಗಿ ಖಂಡಿಸಿ ಕರ್ನಾಟಕ ರಾಜ್ಯ ಯುವ ಸಮೂಹದ ವತಿಯಿಂದ ಮೇಣದಬತ್ತಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಹಲವಾರು ಸ್ಥಳೀಯರು ಭಾಗವಹಿಸಿ ದೇವಸ್ಥಾನ ತೆರವು ಕಾರ್ಯಾಚರಣೆಯ ಕುರಿತು ತಮ್ಮ ಆಕ್ಷೇಪ ವ್ಯಕ್ತಪಡಿಸಿದರು. ಕಾನೂನುಬದ್ಧ ಪ್ರಕ್ರಿಯೆ ಪಾಲಿಸಬೇಕು ಮತ್ತು ಪ್ರಕರಣದ ಸತ್ಯಾಂಶವನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಯುವ ಸಮೂಹದ ರಾಜ್ಯಾಧ್ಯಕ್ಷರಾದ ಡಾ. ಎಸ್. ಸಂಗಮೇಶ್ ರವರು “ದೇವಸ್ಥಾನವು ಸರ್ಕಾರಿ ಅಥವಾ ಬಿ.ಡಿ.ಎ ಜಾಗದಲ್ಲಿದ್ದು ಅತಿಕ್ರಮಣವಾಗಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಕ್ಕೆ ನಮ್ಮ ವಿರೋಧವಿಲ್ಲ. ಅಂತಹ ಕಾರ್ಯದಲ್ಲಿ ನ್ಯಾಯಾಲಯದ ಆದೇಶವಿದ್ದರು ನಾವು ಅದನ್ನು ಸಂಪೂರ್ಣ ಗೌರಸುತ್ತೇವೆ. ಆದರೆ ಕಾನೂನುಬದ್ಧ ಪ್ರಕ್ರಿಯೆ ಪಾಲಿಸದೇ ತೆರವು ಕಾರ್ಯಾಚರಣೆ ನಡೆಸಿರುವುದಾದರೆ ಅದನ್ನು ಪ್ರಶ್ನಿಸುವುದು ನಮ್ಮ ಹಕ್ಕು” ಎಂದು ತಿಳಿಸಿದರು.
ಇನ್ನೂ ಈ ಪ್ರಕರಣದಲ್ಲಿ ಶ್ರೀಕಾಂತ.ಕೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಸಂತೋಷ್ ಸಹಾಯಕ ಅಭಿಯಂತರರು ಅವರ ಪಾತ್ರದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತನಿಖೆಯಲ್ಲಿ ಯಾವುದೇ ನಿಯಮ ಉಲ್ಲಂಘನೆ ಕಂಡುಬಂದರೆ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಅಮಾನತು ಸೇರಿದಂತೆ ಕಠಿಣ ಇಲಾಖಾ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆಯ ಮೂಲಕ ಆಗ್ರಹಿಸಿದರು.

