Site icon NBTV Kannada

ನಮ್ಮ ಪಾಲಿನ ಮೀಸಲಾತಿ ನಮಗೆ ಕೊಡಿ : ಎಚ್.ಬಿ.ಎಚ್‌ ಆಗ್ರಹ

ಲಿಂಗಸುಗೂರು ಅ.16: ನಾವು 49 ಅಲೆಮಾರಿಗಳು ಅಷ್ಟೇ ಇಲ್ಲ. ಒಳಮೀಸಲಾತಿ ಹಂಚಿಕೆಯಲ್ಲಿ ತಾಂತ್ರಿಕ ನೆಪ ಆಗಬಾರದೆಂದು ಇನ್ನೊಂದು ಹತ್ತು ಸೂಕ್ಷ್ಮ ಅಲೆಮಾರಿಗಳನ್ನು ಸೇರಿಸಿ ಒಟ್ಟು 59 ಅಸ್ಪೃಶ್ಯ ಅಲೆಮಾರಿಗಳನ್ನು ಒಂದು ಗುಂಪು ಮಾಡಿದ್ದಾರೆ. ನಮಗೆ ಕೊಡಬೇಕಾದ 1% ಮೀಸಲಾತಿಯನ್ನು ಕೊಡದೇ ಪ್ರಾಶಸ್ತ್ಯದ “ಎ” ಗುಂಪಲ್ಲಿ ಇರಬೇಕಾದವರನ್ನು ನಮ್ಮನ್ನು ಬಲಾಢ್ಯ “ಸಿ” ಗುಂಪಲ್ಲಿ ಹಾಕಿದ್ದಾರೆ. ಇದು ಅನ್ಯಾಯವೇ ಸರಿ ಎಂದು ಅಲೆಮಾರಿ ಜಾಗೃತ ಸಂಘದ ಅಧ್ಯಕ್ಷರಾದ ಎಚ್. ಬಸವರಾಜ್ ಹಟ್ಟಿ ರವರು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಎಸಿ ಆಫೀಸ್ ಮುಂದೆ   ನಡೆದ ಅಸ್ಪೃಶ್ಯ ಅಲೆಮಾರಿಗಳ ಪ್ರತ್ಯೇಕ ಒಳಮೀಸಲಾತಿ ಹೋರಾಟದಲ್ಲಿ ಅವರು ಮಾತನಾಡಿ ಸಚಿವ ಸಂಪುಟದಲ್ಲಿದ್ದ ಸಚಿವರು, ಮುಖ್ಯಮಂತ್ರಿಗಳು ಏನು ಮಾಡಿದ್ದಾರೆ ಗೊತ್ತಿಲ್ಲ. ನಮಗೆ ಕೊಡಬೇಕಾದ 1% ಒಳಮೀಸಲಾತಿಯನ್ನು ನಮಗೆ ಕೊಡದೇ ಬಲಾಢ್ಯ ಸಮುದಾಯಗಳಲ್ಲಿ ಸೇರಿಸಿದ್ದಾರೆ. ಸ್ವಾಮಿ, ನಮಗೆ ಬೇಕಾದದ್ದು 1% ಮೀಸಲಾತಿ. ಮೀಸಲಾತಿಗೋಸ್ಕರ ರಾಜ್ಯದಲ್ಲಾಗಲಿ, ದೆಹಲಿಯಲ್ಲಾಗಲಿ ತಾಲ್ಲೂಕು ಮಟ್ಟದಾಗಲಿ ಹೋರಾಟ ನಡೆಯುತ್ತಲೇ ಇದೆ. ಇನ್ನೂ ನೀವು ಕೊಡುವವರೆಗೆ ಹೋರಾಟ ನಿಲ್ಲದು ಎಂದು ಗುಡುಗಿದರು.

ಮುಂದುವರೆದು,‌ ನೀವು ಯಾವತ್ತು 1% ಒಳಮೀಸಲಾತಿ ಪ್ರತ್ಯೇಕ ಘೋಷಣೆ ಅಲೆಮಾರಿಗಳಿಗಾಗಿ ಅಂತ ಮಾಡುತ್ತಿರೋ ಅಲ್ಲಿಯವರೆಗೆ  ನಿರಂತರವಾಗಿ ನಮ್ಮ ಹೋರಾಟ, ಚಳವಳಿ ಇದ್ದೇ-ಇರುತ್ತದೆ. ಹಾಗಾಗಿ ಸಚಿವರಾಗಲಿ, ಮುಖ್ಯಮಂತ್ರಿಗಳಾಗಲಿ ತಾವು ಅಲೆಮಾರಿ ಸಮುದಾಯಗಳ ಬದುಕಿನ ಚಿಂತಿಸ ಬೇಕು. ನಮ್ಮ ನಿಗಮದ ಅಧ್ಯಕ್ಷ ಸ್ಥಾನವನ್ನು ಕೂಡ ಅಸ್ಪೃಶ್ಯ ಅಲೆಮಾರಿ ಸಮುದಾಯದವರಿಗೆ ಕೊಟ್ಟಿಲ್ಲ. ಅದನ್ನು ಕೂಡ ಬಲಾಢ್ಯ ಸಮುದಾಯದವರಿಗೆ ಕೊಟ್ಟಿದ್ದಾರೆ. ಇಲ್ಲಿ ಅಲೆಮಾರಿಗಳಿಗೆ  ಯಾವ ಸ್ಥಾನಮಾನಗಳು ಕೊಟ್ಟಿಲ್ಲ.‌ ನಮ್ಮ ಅಲೆಮಾರಿಗಳು ಒಬ್ಬರು ಎಂ.ಪಿ ಇಲ್ಲ, ಎಮ್ಎಲ್‌ಎ ಇಲ್ಲ, ಡಿಸಿ ಇಲ್ಲ, ಎಸ್‌ಪಿ ಇಲ್ಲ. ಸರ್ಕಾರದವು ನಮ್ಮ ಬಗ್ಗೆ ಬಹಳ ಅಲಕ್ಷ್ಯದಿಂದ ಪರಿಗಣಿಸಿದೆ.

ನಮಗಾಗಿ 1% ಸಿಕ್ಕರೆ, ಇದುವರೆಗೂ ಸಮುದಾಯದಲ್ಲಿ ಒಬ್ಬರು ಐಎಎಸ್ ಆಗಿಲ್ಲ. ಸಚಿವರಾಗಿಲ್ಲ. ಮುಂದಿನ ದಿನಗಳಲ್ಲಿ ತಾವು ನೀಡಿದ ವಿಶೇಷ ಮೀಸಲಾತಿಯಲ್ಲಿ ನಮ್ಮ ಮಕ್ಕಳಿಗೆ ಅಂತಹ ಉನ್ನತ ಅಧಿಕಾರಗಳು ಸಿಗಬಹುದು. ಅದಕ್ಕಾಗಿ ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಕಾರಣಕ್ಕಾಗಿ ನಮಗೆ ಮೀಸಲಾತಿ ಬೇಕಾಗಿದೆ. ಇದೀಗ ದೆಹಲಿಯ ಹೋರಾಟದಲ್ಲಿ ನಿರತರಾಗಿರುವಂತಹ ನಮ್ಮ ಮುಖಂಡರನ್ನು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ.ಎಚ್.ಸಿ ಮಹಾದೇವಪ್ಪನವರು  ಫೋನು ಮಾಡಿ ಹಿಂತಿರುಗುವಂತೆ ವಿನಂತಿಸಿದ್ದಾರೆ. ಬಹುಶಃ ಸಚಿವರು ದೀಪಾವಳಿಗೆ ಪಟಾಕಿ , ಬಹುಮಾನ ಕೊಡುತ್ತೇನೆಂದು ಆಸೆ ತೋರಿದರೆನೋ. ಆದರೆ ಇಂತಹ ಯಾವುದೇ ಪ್ಯಾಕೇಜ್ ಕೊಡ್ತಿನಿ ಅಂತ ಹೇಳಿದರು ನಾವು ಅದನ್ನು ಒಪ್ಪುವುದಿಲ್ಲ ಎಂದು ತೀಕ್ಷ್ಣವಾಗಿ ನುಡಿದರು.

ನಮಗೆ ಬೇಕಾಗಿರುವುದು ನಮ್ಮ ಪಾಲಿನ 1% ಒಳಮೀಸಲಾತಿ. ನಿಮಗೆ ನಮ್ಮ ಅಲೆಮಾರಿಗಳ ಬಗ್ಗೆ ಕಾಳಜಿ, ಕನಿಕರ ಇದ್ದರೆ 2% ಮಾಡಿ. ಇಲ್ಲ ಅಂದರೆ 1% ಸಂವಿಧಾನಿಕ ಪರ; ಹೆಚ್. ಎನ್. ನಾಗಮೋಹನ್ ದಾಸ್ ರವರ ವರದಿಯಲ್ಲಿ  ಸಲ್ಲಿಕೆಯಲ್ಲಿ ಏನಿದೆಯೊ ಅದನ್ನು ಸರಕಾರ ನಮ್ಮ ಅಲೆಮಾರಿಗಳಿಗೆ ಪ್ರತ್ಯೇಕವಾಗಿ ಕೊಡಿ. ನೀವು ಕೊಟ್ಟಿಲ್ಲ ಅಂದರೆ ನಮ್ಮ ಹೋರಾಟ ನಿಲ್ಲದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಈ ಪ್ರತಿಭಟನೆಯಲ್ಲಿ ಸುಮಾರು ಐನೂರಕ್ಕೂ ಹೆಚ್ಚು ಮಹಿಳೆಯರು ಸೇರಿದಂತೆ ಅಲೆಮಾರಿ ಒಳಮೀಸಲಾತಿ ಹೋರಾಟದಲ್ಲಿ ಸುಡುಗಾಡು ಸಿದ್ಧ ಸಮಾಜದ ಮುಖಂಡ ರಾಮಚಂದ್ರಪ್ಪ, ದಕ್ಕಲಿಗ ಸಮಾಜದ ಮುಖಂಡ ಸುರೇಶ ಕಟ್ಟಿಮನಿ, ಬುಡ್ಗಜಂಗಮ ಸಮಾಜದ ಮುಖಂಡ ಬಸವರಾಜ ಕೋಡಗಂಟಿ , ರಮೇಶ ಮೋತಿ, ಶಿವರೆಡ್ಡಿ, ಪಂಪಣ್ಣ ಮುದಗಲ್ ಹಾಗೂ ಶಿಳ್ಳೆಕ್ಯಾತ, ಸಿಂಧೊಳ್ಳು ಸಮಾಜದ ಮುಖಂಡರು ಭಾಗಿಯಾಗಿದ್ದರು.

Exit mobile version